ಇವತ್ತು ಸಮಾಜವಾದದ ಹೆಸರಿನಲ್ಲಿ ಇಡೀ ಜಗತ್ತಿನಲ್ಲಿ ದೊಡ್ಡ ಹುಯಿಲನ್ನು ಸೃಷ್ಟಿಸಲಾಗಿದ್ದು, ಎಲ್ಲರೂ ಇದಕ್ಕೆ 'ಜೈ...ಜೈ, ಜೈ....ಜೈ!' ಎನ್ನುತ್ತಿದ್ದಾರೆ. ನಾನೇನಾದರೂ 'ಏನಿದು ಸಮಾಜವಾದ? ಇದಕ್ಕೆ ಯಾವ ಬೆಲೆಯೂ ಇಲ್ಲ!,' ಎಂದರೆ ರಾಜನ ಮೆರವಣಿಗೆಯಲ್ಲಿ 'ರಾಜ ಬೆತ್ತಲಾಗಿದ್ದಾನೆ,' ಎಂಬ ಸತ್ಯವನ್ನು ಹೇಳಿದ ಆ ಮಗುವಿಗೆ ಬಂದ ದುರ್ಗತಿಯೇ ನನ್ನದೂ ಆಗುತ್ತದೆ. ಆದರೆ, ಸಮಾಜವಾದದ ಬಗ್ಗೆ ಸತ್ಯವನ್ನು ಹೇಳಲೇಬೇಕಾದ ಕಾಲ ಈಗ ಬಂದಿದೆ. ಹೀಗಾಗಿ, ಯಾರಾದರೊಬ್ಬರು ಆ ಸತ್ಯಗಳನ್ನು ಹೇಳಲೇಬೇಕು.
ಮನುಷ್ಯನ ಸ್ವಭಾವವೇ ವಿಚಿತ್ರ. ಇದು, ಡಾಣಾ-ಡಂಗುರ ಹೊಡೆದು ಪ್ರತಿμÁ್ಠಪಿಸಲಾಗುವ ಸುಳ್ಳುಗಳನ್ನೇ ಸತ್ಯವೆಂದು ನಂಬುತ್ತದೆ. ಪದೇಪದೇ ಹೇಳುವ ಸುಳ್ಳೇ ಹುಲುಮಾನವನಿಗೆ ಸತ್ಯದಂತೆ ಕಾಣತೊಡಗುತ್ತದೆ. ಹೀಗಾಗಿ, ನೀವು ನಿಜವಾದ ಸತ್ಯ ಯಾವುದೋ ಅದನ್ನು ಹೇಳಿದರೆ, ಮೊದಮೊದಲು ಎಲ್ಲರೂ ಅನುಮಾನಿಸುತ್ತಾರೆ; ಅವರಿಗೆ ಅದು ಸತ್ಯವೆನಿಸುವುದೇ ಇಲ್ಲ! ಸಮಾಜವಾದದ ಹೆಸರಿನಲ್ಲೂ ಜಗತ್ತಿನಾದ್ಯಂತ ಕಳೆದ ನೂರು ವರ್ಷಗಳಲ್ಲಿ ಇಂಥ ಭ್ರಮೆಯನ್ನು, ಅಪಕಲ್ಪನೆಗಳನ್ನು ಸೃಷ್ಟಿಸಲಾಗಿದೆ. ಇದರ ಬಗ್ಗೆ ಒಂದೇ ಸಮನೆ ಮಾಡುತ್ತಿರುವ ಪ್ರಚಾರ ಮತ್ತು ಕೂಗುತ್ತಿರುವ ಘೋಷಣೆಗಳಿಂದಾಗಿ ಏನಾಗಿದೆಯೆಂದರೆ, ನಿಜವಾಗಿಯೂ ಸಮಾಜವಾದಿಗಳಲ್ಲದೇ ಇರವವರೆಲ್ಲ ಈಗ 'ಸಮಾಜವಾದಿಗಳು' ಎನಿಸಿಕೊಳ್ಳುತ್ತಿದ್ದಾರೆ! ಸಮಾಜವಾದದ ತತ್ವ-ಸಿದ್ಧಾಂತಗಳನ್ನು ತಮ್ಮ ಆಂತರ್ಯದಲ್ಲಿ ನಂಬದೇ ಇರುವವರೆಲ್ಲ ಅದನ್ನು ಹಾಡಿ ಹೊಗಳುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ, ಸಮಾಜವಾದದ ವಿರುದ್ಧ ಮಾತನಾಡುವ ಧೈರ್ಯ ಯಾರೊಬ್ಬರಿಗೂ ಇಲ್ಲವೆನಿಸುತ್ತದೆ. ಅನುಭವಿಗಳ ಈ ಜಗತ್ತಿನಲ್ಲಿ ನಾನೊಬ್ಬ ಅನನುಭವಿ. ಆದ್ದರಿಂದ, ನಾನು ಇದರ ವಿರುದ್ಧ ಧೈರ್ಯದಿಂದ ಮಾತನಾಡಲಿದ್ದೇನೆ.
ಎಲ್ಲರೊಳಗೊಂದಾಗು ಮಂಕುತಿಮ್ಮ