ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮ. ಹದಿನಾಲ್ಕು ವರ್ಷ ವನವಾಸಮಾಡುವ ಮೂಲಕ ತನ್ನ ತಂದೆಗೆ ಕೊಟ್ಟ ಮಾತನ್ನು ಚಾಚೂ ತಪ್ಪದೆ ನಡೆಸಿದವನು. ಸೀತೆ, ಲಕ್ಷ್ಮಣ ಅವನ ಜೊತೆ ಕಾಡಿಗೆ ಹೋದರು. ಹನುಮಂತ ಕಾಡಿನಲ್ಲಿ ಶ್ರೀರಾಮನ ಬಂಟನಾದ. ದಶರಥ, ಭರತ, ಸುಗ್ರೀವ, ರಾವಣ, ಶೂರ್ಪನಖಿ, ವಾಲಿ, ವಿಭೀಷಣ ಮೊದಲಾದವರು ಒಳಿತಿನ ಹಾಗೂ ಕೆಡುಕಿನ ಸಂಕೇತಗಳಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ಶ್ರೀರಾಮನ ದಿವ್ಯಕಥೆಯನ್ನು ಪ್ರಶ್ನೋತ್ತರಗಳ ಮೂಲಕ ಪರಿಚಯ ಮಾಡಿಕೊಡುವ ಕೃತಿ 'ರಾಮಾಯಣ ನಿಮಗೆಷ್ಟು ಗೊತ್ತು?' ಇದರಲ್ಲಿ ೧೫೦ಕ್ಕೂ ಹೆಚ್ಚು ಪಾತ್ರಗಳನ್ನು ಕುರಿತ ೨೦೦೦ ಪ್ರಶ್ನೋತ್ತರಗಳಿವೆ. ಮಹರ್ಷಿಗಳ, ತಪಸ್ವಿಗಳ ಬದುಕು, ನದಿ, ಅರಣ್ಯ, ಪರ್ವತಗಳ ವರ್ಣನೆ, ರಾಮ-ರಾವಣರ ಯುದ್ಧ, ಸೀತೆಯ ಅಗ್ನಿಪ್ರವೇಶ, ಶ್ರೀರಾಮನ ಪಟ್ಟಾಭಿಷೇಕ, ಹೀಗೆ ಮಾಹಿತಿಗಳ ಒಂದು ಮಹಾಪೂರವೇ ಇಲ್ಲಿ ಹರಿದಿದೆ. ನಮ್ಮ ದೇಶದ ಪವಿತ್ರ ಗ್ರಂಥಗಳಲ್ಲಿ ರಾಮಾಯಣಕ್ಕೆ ವಿಶಿಷ್ಟ ಸ್ಥಾನವುಂಟು. ಎಲ್ಲರಿಗೂ ಈ ಮಹಾಕಾವ್ಯವನ್ನು ಇಡಿಯಾಗಿ ಓದುವುದು ಸಾಧ್ಯವಿಲ್ಲ. ಆದರೆ ಜನಸಾಮಾನ್ಯರು ಈ ಗ್ರಂಥದಲ್ಲಿ ಬರುವ ವರ್ಣಣೆಗಳನ್ನು, ಪಾತ್ರಗಳನ್ನು, ಘಟನೆಗಳನ್ನು, ಮನೋವ್ಯಾಪಾರಗಳನ್ನು ಬಿಡಿಬಿಡಿಯಾಗಿ ಗ್ರಹಿಸಲು ಸಹಾಯಕವಾಗುವ ಒಂದು ಮಾರ್ಗದರ್ಶಕ ಕೃತಿ ಅತ್ಯಗತ್ಯವಾಗಿತ್ತು. ಎಂ.ವಿ. ನಾಗರಾಜರಾಯರ ಅಪಾರ ಪರಿಶ್ರಮದಿಂದ ದೂಪುಗೊಂಡಿರುವ ಈ ಕೃತಿ ಅಂಥ ಅಗತ್ಯವನ್ನು ಪೂರೈಸಿದೆ. ಪಂಡಿತ ಪಾಮರರಿಬ್ಬರಿಗೂ ಪ್ರಿಯವಾಗಬಲ್ಲ, ತೀರ ಉಪಯುಕ್ತವಾದ ಅಪರೂಪದ ಪುಸ್ತಕ ಇದು.