ಬಿದ್ದ ಛಾವಣಿ, ಕುಸಿದ ಗೋಡೆಗಳು, ಒಳಗೆ ಎಷ್ಟೋ ನೆನಪುಗಳು ಹುದುಗಿ ಹೋಗಿದ್ದವು. ಗತಕಾಲದ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿತ್ತು ಶ್ರೀಕಂಠಯ್ಯನ ಮನೆ.
ರಾತ್ರಿಯೆಲ್ಲ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ಗುಂಡಿಗಳಲ್ಲಿ ಅಲ್ಪ ಸ್ವಲ್ಪ ನೀರಿತ್ತು. ಬಾಯಾರಿದ ಭೂಮಿ ಬೊಗಸೆಯೊಡ್ಡಿ ಕುಡಿದು ದಣಿವಾರಿಸಿಕೊಂಡಂಗೆ ಕಂಡಿತು.
ಭಾಗೀರಥಿಯ ಇಡೀ ಸಂಸಾರ ಮುದುಡಿ ಕೂತಿತ್ತು ಬಸ್ಸಿನಲ್ಲಿ. 'ಪೆದ್ದು ಮುಂಡೇದೆ' ಸೀತಕ್ಕನ ದನಿ ಕೇಳಿಸಿತು. ಬಂದಿದ್ದು ನಾಲ್ಕಾರು ಪ್ರಯಾಣಿಕರು. ಎಲ್ಲ ಮರುಕ ಪಡುವವರೇ. 'ನಿಶ್ಚಿಂತ ಪುರ'ವೆ ಜಗತ್ತೆಂದು ಭಾವಿಸಿದ ಹೆಣ್ಣು ಹೊರ ಪ್ರಪಂಚಕ್ಕೆ ಕಾಲಿಟ್ಟಿದ್ದು ವಿಸ್ಮಯವಲ್ಲ. ಸಮಸ್ಯೆ ಮತ್ತು ಅನ್ವೇಷಣೆ ಮುಖಾಮುಖಿಯಾಗಿತ್ತು.