ಸಾರಾಂಶ

ಸಂಭಾಷಣೆ ಎನ್ನುವುದು ಗೊಡ್ಡುಹರಟೆ ಆಗಬೇಕಾಗಿಲ್ಲ. ಭಾಷಣ ಎನ್ನುವುದು ತಲೆಚಿಟ್ಟು ಹಿಡಿಸುವ ಮಾತುಗಾರಿಕೆ ಆಗಬೇಕಾಗಿಲ್ಲ. ಸರಸ ಸನ್ನಿವೇಶದಲ್ಲಿ ಸಮಾಧಾನದಿಂದ ಇತರರ ಮಾತನ್ನು ಕೇಳಿಸಿಕೊಳ್ಳುತ್ತಾ ತಮ್ಮ ಮಾತನ್ನು ಸೇರಿಸುತ್ತಾ ನುಡಿಕೊಂಡಿಗಳನ್ನು ಸೇರಿಸುತ್ತಾ ಹೋದರೆ ಸಂಭಾಷಣೆ ಅಪ್ಯಾಯಮಾನವಾಗುತ್ತದೆ. ಭಾಷಣಕಾರ ಸಭಿಕರಲ್ಲಿ ಕುತೂಹಲವನ್ನು ಕೆರಳಿಸುತ್ತ, ಚಿಂತನೆಯನ್ನು ಅರಳಿಸುತ್ತ ವಿಚಾರ ಪ್ರವಾಹವನ್ನು ಹರಿಸುತ್ತ ಹೋದರೆ ಭಾಷಣ ಕೂಡ ಸಂತೋಷವನ್ನು ಕೊಡುವುದರ ಜೊತೆಯಲ್ಲಿ ಬುದ್ಧಿಶಕ್ತಿಗೆ ಇನ್ನಷ್ಟು ಚೈತನ್ಯವನ್ನು ಒದಗಿಸಬಲ್ಲದು. ಯಾರೂ ಹುಟ್ಟಿನಿಂದ ಸಂಭಾಷಣಾ ಚತುರರಾಗಿರುವುದಿಲ್ಲ. ಶ್ರೇಷ್ಠ ಭಾಷಣಕಾರರೂ ಆಗಿರುವುದಿಲ್ಲ. ಸಾಮಾನ್ಯ ಸೂತ್ರಗಳನ್ನು ಅನುಸರಿಸುವ ಮೂಲಕ ಹಾಗೂ ಅನುಭವ ಮತ್ತು ತರಬೇತಿಯ ಮೂಲಕ ಪ್ರಾವೀಣ್ಯತೆಯನ್ನು ಪಡೆಯಬಹುದು. ಈ ದಿಕ್ಕಿನಲ್ಲಿ ಕೆಲವು ಸರಳವಾದ ಮಾರ್ಗದರ್ಶಕ ಸೂತ್ರಗಳನ್ನು ಒದಗಿಸಿಕೊಡುವುದರ ಜೊತೆಯಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹತ್ತು-ಹಲವು ಮಾಹಿತಿಗಳನ್ನು ವಿಚಾರಗಳನ್ನು ಕೊಡಲು ಪ್ರಯತ್ನಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಹೆಜ್ಜೆಯಿಡಲು ಪ್ರಯತ್ನಿಸುವವರಿಗೆ ತೋರುಗೋಲಿನಂತೆ ಈ ಕೃತಿ ಒತ್ತಾಸೆಯನ್ನು ನೀಡುತ್ತದೆ.

ಭಾಷಣ ಕಲೆ ಮತ್ತು ಸಂಭಾಷಣ ಕಲೆ
ಲೇಖಕರು:
ಜಿ ಎಂ ಕೃಷ್ಣಮೂರ್ತಿ
ಪ್ರಕಾರ:
ವ್ಯಕ್ತಿತ್ವ ವಿಕಸನ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2011
ರಕ್ಷಾಪುಟ:
---
ಪುಟಗಳು:
196
ಬೆಲೆ:
100 ರೂ.
ಲೇಖಕರ ಪರಿಚಯ
ಕನ್ನಡದ ಹಿರಿಯ ಲೇಖಕರಾದ ಜಿ.ಎಂ. ಕೃಷ್ಣಮೂರ್ತಿಯವರು ಜನಿಸಿದ್ದು ೧೯೪೦ರಲ್ಲಿ, ಶಿವಮೊಗ್ಗ ನಗರದಲ್ಲಿ. ೧೯೫೭ರ ವರೆಗೂ ಅಲ್ಲಿಯೇ ಶಿಕ್ಷಣ ಪಡೆದು ಎಸ್ಎಸ್ಎಲ್ಸಿ ಆದ ತರುವಾಯ ಕೆಲವು ಸಮಯ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ನಂತರ ಮತ್ತೆ ಕೆಲವು ಕಾಲ ಅರಣ್ಯ ಇಲಾಖೆಯಲ್ಲಿ ಗಾರ್ಡ್ ಆಗಿ ಸೇವೆ ಸಲ್ಲಿಸಿದರು. ೧೯೫೯ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಎರಡನೆ ದರ್ಜೆ ಸಹಾಯಕರಾಗಿ ಸೇರಿ ೧೯೮೫ರಲ್ಲಿ ಸ್ವಯಂ-ನಿವೃತ್ತಿ ಪಡೆದರು. ಪ್ರಸ್ತುತ ಬೆಂಗಳೂರಿನಲ್ಲಿದ್ದುಕೊಂಡು ಸಾಹಿತ್ಯ ಕೃಷಿ ನಡೆಸಿದ್ದಾರೆ. ಜಿಎಂಕೆಯವರು ತಮ್ಮ ಶಿಕ್ಷಣವನ್ನು ಮುಂದುವರಿಸಬೇಕೆಂಬ ಹಂಬಲದಿಂದ ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು; ನಂತರ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ವೇತನವಿಲ್ಲದ ರಜೆ ಪಡೆದು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.(ಕನ್ನಡ) ಪದವಿಯನ್ನು ಪ್ರಥಮ ದರ್ಜೆಯಲ್ಲಿ ತಮ್ಮದಾಗಿಸಿಕೊಂಡರು. ಡಾ. ದ.ರಾ. ಬೇಂದ್ರೆ, ಡಾ.ಬಿ.ಆರ್. ಅಂಬೇಡ್ಕರ್ ಅವರುಗಳನ್ನು ಕುರಿತಂತೆ ವ್ಯಕ್ತಿ ಚಿತ್ರಣ ಕೃತಿಗಳನ್ನು ತಂದಿರುವ ಜಿಎಂಕೆಯವರು ಅಡಾಲ್ಫ್ ಹಿಟ್ಲರನ ‘ಮೈನ್ ಕಾಂಪ್’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆದೆ ಬಂತು ಬೆನಕನಿಗೆ (ಕಾದಂಬರಿ), ಒಂದು ಜೀವನದ ಚರಿತ್ರೆ (ಕಥಾಸಂಕಲನ), ಮೋಹನದಾಸ್ ಕರಮ್ಚಂದ್ ಗಾಂಧಿ (ಆತ್ಮಕಥೆ), ವಿಶ್ವವಿಖ್ಯಾತ ಪುರಾಣಗಳು (ಅನುವಾದ), ಮಹಾಕವಿ ಕಾಳಿದಾಸ, ಭಗವಾನ್ ಬುದ್ಧ (ವ್ಯಕ್ತಿ ಚಿತ್ರಣ) ಮೊದಲಾದ ೫೦ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ; ಅನುವಾದ ಮಾಡಿದ್ದಾರೆ. ಅಲ್ಲದೆ ಕೆಲವಾರು ಕೃತಿಗಳ ಸಂಪಾದನೆ ಮಾಡಿದ್ದಾರೆ. ವಿಜ್ಞಾನ, ಸಾಹಿತ್ಯ, ನೀತಿಕಥೆಗಳು, ವ್ಯಕ್ತಿತ್ವ ವಿಕಸನ, ಆರ್ಥಿಕ ವಿಷಯ, ಪುರಾಣ, ಚರಿತ್ರೆ, ಸಾಮಾಜಿಕ ವಿಷಯಗಳು-ಹೀಗೆ ಜಿಎಂಕೆಯವರ ಕಾರ್ಯವ್ಯಾಪ್ತಿ ವಿಶಾಲವಾದ ಕ್ಯಾನ್ವಾಸಿನದು.