ಸಾರಾಂಶ

ಅಖಂಡ ಭಾರತದಲ್ಲಿ ಕಾಶ್ಮೀರದ ಪರಂಪರೆ ಉಜ್ವಲವಾದುದು. ಶೈವಾಗಮ, ಕಾವ್ಯ ಮೀಮಾಂಸೆ ಇವೆಲ್ಲವೂ ಹುಟ್ಟಿದ್ದು ಕಾಶ್ಮೀರದಲ್ಲೇ. ಆದಿಶಂಕರರ ದೃಷ್ಟಿಯಲ್ಲಿ ಕಾಶ್ಮೀರವು ಜ್ಞಾನದ ಅಧಿದೇವತೆಯ ಮೂಲಸ್ಥಾನ. ಅದರ ಸೌಂದರ್ಯವಂತೂ ರಮಣೀಯವಾದುದು. ಆದರೆ ರಾಜಕೀಯ ಮತ್ತು ಧಾರ್ಮಿಕ ಮೂಲಭೂತ ವಾದ ಹಾಗೂ ಪರಾಕ್ರಮಣಗಳಿಂದ ಕಾಶ್ಮೀರದಷ್ಟು ನಲುಗಿರುವ ರಾಜ್ಯ ಇನ್ನೊಂದಿಲ್ಲ. ದುರಂತವೆಂದರೆ ನಮ್ಮಲ್ಲಿ ಇತಿಹಾಸದ ದಾಖಲಾತಿಯಾಗಲಿ, ಸಮಕಾಲೀನ ಘಟನೆಗಳಿಗೆ ತೋರುವ ಸ್ಪಂದನವಾಗಲಿ ಯಾವತ್ತೂ ಗುಂಪುಗುಳಿತನ ಮತ್ತು ಪಕ್ಷಪಾತವನ್ನು ಮೀರಿಲ್ಲ. ಈ ಅಪ್ರಾಮಾಣಿಕತೆ ನಮ್ಮ ದೇಶದ ಬೌದ್ಧಿಕ ವರ್ಗದಲ್ಲಿ ಮೇರೆ ಮೀರಿದೆ. ಜಗತ್ತಿನ ಯಾವುದೋ ಭೂಭಾಗದಲ್ಲಿ ನಡೆಯುವ ಸಣ್ಣ ಘಟನೆಗೆ ಹಾರಾಡುವ ಈ ಜನ, ನಮ್ಮಲ್ಲೇ ನಡೆಯುವ ಭೀಕರ ಘಟನೆಗೂ ತಮಗೂ ಯಾವ ಸಂಬಂಧವೂ ಇಲ್ಲ ಎನ್ನುವಂತೆ ಮೌನ ವಹಿಸುತ್ತಾರೆ. ಹೀಗಾಗಿ ನಮ್ಮಲ್ಲಿ ಆಂಶಿಕ ಸತ್ಯಗಳ ಆರ್ಭಟವಿದೆಯೇ ವಿನಾ ಅಖಂಡ ಸತ್ಯವನ್ನು ಹಿಡಿದಿಡುವ ಧೈರ್ಯ ಹೆಚ್ಚಿನವರಿಗೆ ಇಲ್ಲ. ತಮ್ಮ ವೈಯಕ್ತಿಕ ಲಾಭ-ನಷ್ಟಗಳ ತಕ್ಕಡಿಗೆ ಇವರು ಪೊಳ್ಳು ಸಿದ್ಧಾಂತಗಳ ವೇಷವನ್ನು ತೊಡಿಸುತ್ತಾರಷ್ಟೆ. ಏನೇ ಆದರೂ ಸತ್ಯವು ಒಂದು ದಿನ ಜಗತ್ತಿಗೆ ಗೊತ್ತಾಗಲೇಬೇಕು.
ಈ ಕೃತಿಯಲ್ಲಿ ಸಂಘಟಿತ ಹಿಂಸೆಯಿಂದ ನಲುಗಿದ ಕಾಶ್ಮೀರದ ಸತ್ಯವಿದೆ. ಅದರಲ್ಲಿ ಸಿಲುಕಿ ನೇರವಾಗಿ ನಲುಗಿದವರ ಹೃದಯವಿದ್ರಾವಕ ನಿರೂಪಣೆ ಇದೆ. ಆದರೆ ಇದರಲ್ಲಿ ಆಂತರ್ಯದ ಆರ್ದ್ರತೆಯನ್ನು ಕಾಪಾಡಿಕೊಂಡಿರುವ ಔದಾರ್ಯವಿದೆ. ಕಾಶ್ಮೀರದ ಸಮಸ್ಯೆಗೆ ಸ್ಪಂದಿಸದೆ ಇರುವವರ ಆಷಾಢಭೂತಿತನವನ್ನು ಇದರಲ್ಲಿ ಅನಾವರಣಗೊಳಿಸಲಾಗಿದೆ. ಇದು ಆತ್ಮಸಾಕ್ಷಿಗೆ ಬದ್ಧವಾದ, ಅಂತಃಕರಣವನ್ನು ಕಲಕುವಂತಹ ಕೃತಿ. ನಿರೂಪಣೆಯ ದೃಷ್ಟಿಯಿಂದಲೂ ಇದು ಗಮನಾರ್ಹವಾಗಿದೆ.
ಸೀಮಿತ ಗ್ರಹಿಕೆ ಮತ್ತು ಸತ್ಯಕ್ಕೆ ಎರವಾದ ಚರ್ಚೆಗಳಲ್ಲೇ ಗಿರಕಿ ಹೊಡೆಯುತ್ತಿರುವ ಕನ್ನಡ ವಾಙ್ಮಯಕ್ಕೆ ಇಂಥ ಕೃತಿಗಳು ಅವಶ್ಯವಾಗಿ ಬೇಕಾಗಿವೆ. ಇಲ್ಲದೆ ಹೋದರೆ, ಒಮ್ಮುಖವಾಗಿರುವ ನಮ್ಮ ಸಾಹಿತ್ಯಲೋಕ ಇನ್ನಷ್ಟು ಜಡಗೊಂಡು, ನಿಸ್ತೇಜವಾಗಿ ಬಿಡುತ್ತದೆ. ಸ್ವತಃ ಕಾಶ್ಮೀರದವರಾದ ರಾಹುಲ್ ಪಂಡಿತ ಅವರ ಈ ಕೃತಿಯನ್ನು ಸೊಗಸಾಗಿ ಮತ್ತು ಪ್ರಾಮಾಣಿಕವಾಗಿ ಕನ್ನಡಕ್ಕೆ ತಂದಿರುವ ಬಿ.ಎಸ್. ಜಯಪ್ರಕಾಶ ನಾರಾಯಣ ತಮ್ಮ ವಿಭಿನ್ನ ಅನುವಾದಗಳ ಮೂಲಕ ಕನ್ನಡಿಗರಿಗೆ ಅಗತ್ಯವಾದ ಅರಿವಿನ ಸ್ರೋತಗಳನ್ನು ಒದಗಿಸುತ್ತಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಓದುಗರು ಪೂರ್ವಗ್ರಹವಿಲ್ಲದೆ ಇಂತಹ ಕೃತಿಗಳನ್ನು ಓದಿ, ಮರೆವಿಗೆ ಸಂದಿರುವ ಸತ್ಯಗಳನ್ನು ಅರಿಯಬೇಕು.

ಕದಡಿ ಕಣಿವೆ
ಲೇಖಕರು:
ರಾಹುಲ್ ಪಂಡಿತ
ಅನುವಾದಕರು :
ಬಿ ಎಸ್ ಜಯಪ್ರಕಾಶ ನಾರಾಯಣ
ಪ್ರಕಾರ:
ಅನುವಾದ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2015
ರಕ್ಷಾಪುಟ:
ರಘು ಅಪಾರ
ಬೆನ್ನುಡಿ:
ಎಸ್.ಎಲ್. ಭೈರಪ್ಪ
ಪುಟಗಳು:
330
ಬೆಲೆ:
230 ರೂ.
ಲೇಖಕರ ಪರಿಚಯ
ಪ್ರಸ್ತುತ ಕೃತಿಯನ್ನು ಕನ್ನಡಕ್ಕೆ ತಂದಿರುವ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಚನ್ನರಾಯಪಟ್ಟಣ ತಾಲೂಕಿನ ಅಗ್ರಹಾರ ಬೆಳಗುಲಿಯವರು. ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾಭ್ಯಾಸಗಳನ್ನು ಹುಟ್ಟೂರು ಹಾಗೂ ತಿಪಟೂರಿನಲ್ಲಿ ಪೂರೈಸಿದ ಇವರು ನಂತರ ಬೆಂಗಳೂರಿನ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ ಮೂಲಕ ಪತ್ರಿಕೋದ್ಯಮ ಪದವಿ ಪಡೆದು, ಪ್ರಸ್ತುತ ಪತ್ರಕರ್ತರಾಗಿ ಹಿರಿಯ ಹುದ್ದೆಯಲ್ಲಿದ್ದಾರೆ. ಇವರು ಹೊರತಂದಿರುವ ಇತರ ಕೃತಿಗಳು: ಹೃದಯದ ಸಹಜ ತರಂಗ (ಲೇಖನಗಳ ಸಂಗ್ರಹ); ನನ್ನ ಬದುಕು, ನನ್ನ ಫೋಟೋಗ್ರಫಿ: ಫೋಟೋಗ್ರಾಫರನ ನೆನಪುಗಳು (ಹೆಸರಾಂತ ಛಾಯಾಗ್ರಾಹಕ ಕೆ.ಜಿ. ಸೋಮಶೇಖರ್ ಜೀವನ ನಿರೂಪಣೆ); ನಾನು ಮಲಾಲಾ, ಸೊಗಸುಗಾರನ ಏಳುಬೀಳು: ವಿಜಯ್ ಮಲ್ಯ ವೃತ್ತಾಂತ; ಡಾ. ಯುಆರ್ಎ ಉಪನ್ಯಾಸ - ನನ್ನ ಸಾಹಿತ್ಯದ ಐದು ದಶಕಗಳು (ಅನುವಾದ); ಸಂಪಾದಕರ ಸಂಪಾದಕ: ಪಾರದರ್ಶಕ ಪತ್ರಕರ್ತ ಇ. ರಾಘವನ್ (ಸಹ ಸಂಪಾದನೆ - ಕೆ. ಕರಿಸ್ವಾಮಿ ಅವರ ಜೊತೆಗೂಡಿ); ಕ್ಯಾಪ್ಟನ್ ಗೋಪಿನಾಥ್, ಕಿರಣ್ ಬೇಡಿ (ವ್ಯಕ್ತಿಚಿತ್ರಗಳು), ಜೀವ ಜೀವದ ನಂಟು (ಅನಾಮಿಕರ ವ್ಯಕ್ತಿಚಿತ್ರ, ಪ್ರಬಂಧಗಳು).