ಯಂಡಮೂರಿ ವೀರೇಂದ್ರನಾಥರ ಕೃತಿಗಳೆಂದರೆ ಸಾಕು, ಅವುಗಳಲ್ಲಿ ರೋಚಕತೆ ತಾನೇ ತಾನಾಗಿ ಮೂಡಿಬರುತ್ತದೆ; ಬದುಕಿನ ತವಕ ತಲ್ಲಣಗಳು ಮನಮುಟ್ಟುವಂತೆ ಚಿತ್ರಿತಗೊಂಡಿರುತ್ತವೆ; ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ ಇರುತ್ತದೆ.
ಲೇಡೀಸ್ ಹಾಸ್ಟೆಲ್ ಸಹ ಅಂತಹ ಒಂದು ಕೃತಿ.
ಹಾಸ್ಟೆಲ್ ಸೇರುವ ಹೆಣ್ಣು ಮಕ್ಕಳು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಗೆಳತಿಯರನ್ನು ಆರಿಸಿಕೊಳ್ಳುತ್ತಾರೆ; ಕೆಲವರು ಮಿತಿಯನ್ನು ಮೀರಿ ದುರಂತದತ್ತ ಸಾಗಿದರೆ ಕೆಲವರು ತಮ್ಮ ಗುರಿಯನ್ನು ಸಮರ್ಥವಾಗಿ ತಲಪುತ್ತಾರೆ.
ಹಾಸ್ಟೆಲ್ ಒಂದರಲ್ಲಿ ಸಂಭವಿಸುವ ಹುಡುಗಿಯೊಬ್ಬಳ ಸಾವು. ಅದು ಆತ್ಯಹತ್ಯೆಯೋ ಕೊಲೆಯೋ ಎನ್ನುವುದೇ ಜಿಜ್ಞಾಸೆ. ಅದರ ಸಂಬಂಧ ಬಂಧಿತನಾಗುವ ವ್ಯಕ್ತಿಯೊಬ್ಬನ ಪತ್ನಿ ನಡೆಸುವ ತನಿಖೆ, ಆಕೆಯ ಧೈರ್ಯ, ಬುದ್ಧಿವಂತಿಕೆ ಓದುಗರನ್ನು ಅಯಸ್ಕಾಂತದಂತೆ ಸೆಳೆಯುತ್ತದೆ.
ರಾಜಾ ಚೆಂಡೂರರ ಎಂದಿನ ಸೊಬಗಿನ ಅನುವಾದ ಕೃತಿಗೆ ಮತ್ತಷ್ಟು ಕಳೆತಂದಿದೆ.