ಮಹಾಬಲೇಶ್ವರ ರಾವ್ ಅವರು ಹುಟ್ಟಿದ್ದು ೧೯೫೨ರಲ್ಲಿ, ಉಡುಪಿ ಜಿಲ್ಲೆಯ ಮಣೂರು ಗ್ರಾಮದಲ್ಲಿ.
ಎಂ.ಎ., ಎಂ.ಎಡ್, ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದರು; ಸುಮಾರು ೩೦ ವರ್ಷ ಉಡುಪಿಯ ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು; ೧೪ ವರ್ಷ ಪ್ರಾಂಶುಪಾಲರಾಗಿದ್ದರು. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ಪ್ರಸಿದ್ಧರಾಗಿರುವ ಅವರು ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಹಂತದ ವರೆಗಿನ ಶಿಕ್ಷಕರ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ದುಡಿದವರು; ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’, ಮೊದಲಾದ ಪತ್ರಿಕೆಗಳಲ್ಲಿ ಶಿಕ್ಷಣ, ಕ್ರೀಡೆ, ಚಲನ ಚಿತ್ರ, ಸಾಹಿತ್ಯ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೂರಾರು ಲೇಖನಗಳನ್ನು ಪ್ರಕಟಿಸಿದವರು.
ಮಹಾಬಲೇಶ್ವರ ರಾವ್ ಅವರು ಬರೆದಿರುವ, ಅನುವಾದಿಸಿರುವ ನೂರಕ್ಕೂ ಹೆಚ್ಚು ಪುಸ್ತಕಗಳಲ್ಲಿ ಸೃಜನಶೀಲತೆ, ಕಾರಂತರ ದೃಷ್ಟಿ-ಸೃಷ್ಟಿ, ಭಾರತೀಯ ಜನಪದ ಕತೆಗಳು (ಎ.ಕೆ.ರಾಮಾನುಜನ್), ಮನೆ-ಶಾಲೆ, ಸಂಶೋಧನ ಮಾರ್ಗ, ಶಿಕ್ಷಣದಲ್ಲಿ ಮನೋವಿಜ್ಞಾನ, ಪ್ರೌಢ ಶಾಲೆಗಳಲ್ಲಿ ಕನ್ನಡ ಬೋಧನೆ, ಸ್ಥಿತ್ಯಂತರ, ಉದಯೋನ್ಮುಖ ಭಾರತದಲ್ಲಿ ಶಿಕ್ಷಣ, ಬಾಳಿಗೊಂದು ಭಾಷ್ಯ (೩ ಸಂಪುಟಗಳಲ್ಲಿ ಜೆ.ಕೆ.), ಪರಿಸರ ಶಿಕ್ಷಣ, ಮಹಿಳಾ ಶಿಕ್ಷಣ, ಪ್ರಾಥಮಿಕ ಶಿಕ್ಷಣ: ಸಮಸ್ಯೆಗಳು - ಸವಾಲುಗಳು ಮುಖ್ಯವಾದುವು. ’ಡಾ: ಹಾ.ಮಾ. ನಾಯಕ ದತ್ತಿನಿಧಿ ಪುರಸ್ಕಾರ’, ’ಗೊರೂರು ಸಾಹಿತ್ಯ ಪುರಸ್ಕಾರ’, ’ಶ್ರೀ.ವಸುದೇವ ಭೂಪಾಲಂ ದತ್ತಿನಿಧಿ ಪುರಸ್ಕಾರ’, ’ಉಪಾಧ್ಯಾಯ ಸಮ್ಮಾನ್ ರಾಜ್ಯ ಪುರಸ್ಕಾರ’. ’ಅಂತಾರಾಷ್ಟ್ರೀಯ ರೋಟರಿ ವೃತ್ತಿ ಶ್ರೇಷ್ಠತಾ ಪುರಸ್ಕಾರ’ - ಇವು ಅವರು ಪಡೆದಿರುವ ಅನೇಕ ಪ್ರಶಸ್ತಿಗಳಲ್ಲಿ ಗಮನಾರ್ಹವಾದುವು.